ಮೂಡಿಗೆರೆ ತಾಲ್ಲೂಕಿನ ಬೆಳಗೋಡು ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಹಸುವಿಗೆ ಗ್ರಾಮದ ಯುವಕರು ಹಾಗೂ ಬಜರಂಗದಳ ಕಾರ್ಯಕರ್ತರು ಮಾನವೀಯತೆಯ ಉದಾಹರಣೆಯಾಗುವಂತೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರಾಮದ ನಿವಾಸಿಯೊಬ್ಬರ ಹಸು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿತ್ತು. ವಿಷಯ ತಿಳಿಯುತ್ತಿದ್ದಂತೆ ಬೆಳಗೋಡು ಗ್ರಾಮದ ಬಜರಂಗದಳ ಕಾರ್ಯಕರ್ತರು ಮತ್ತು ಯುವಕರು ಸ್ಥಳಕ್ಕೆ ಆಗಮಿಸಿ, ಹಸುವಿಗೆ ಗೌರವಪೂರ್ವಕವಾಗಿ ಅಂತಿಮ ನಮನ ಸಲ್ಲಿಸಿದರು.
ಬಳಿಕ ಗ್ರಾಮಸ್ಥರ ಸಹಕಾರದೊಂದಿಗೆ ಸೂಕ್ತ ಸ್ಥಳದಲ್ಲಿ ಗುಂಡಿ ತೋಡಿ, ಸಂಪ್ರದಾಯಬದ್ಧವಾಗಿ ಹಸುವಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೂಗ ಪ್ರಾಣಿಗಳ ಮೇಲಿನ ಕಾಳಜಿ ಮತ್ತು ಗೌರವವನ್ನು ತೋರಿಸುವ ಈ ಕಾರ್ಯ ಗ್ರಾಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು


